jai ganesha

om

Saturday, 9 July 2011

ಸೋಮವಾರ ತಪ್ತ ಮುದ್ರಾಧಾರಣೆ
ಗುರುರಾಜ ಪೋಶೆಟ್ಟಿಹಳ್ಳಿ
July 09, 2011 Share [-]Text[+]

Topics
ತಪ್ತ ಮುದ್ರಾಧಾರಣೆ ,
ಗೋಪಿಚಂದನ ,
ಊರ್ಧ್ವ ಪುಂಡ್ರಧಾರಣೆ ,
ಈ ವಿಭಾಗದಿಂದ ಇನ್ನಷ್ಟು
ತಪ್ತ ಮುದ್ರಾಧಾರಣೆ ವಿಷ್ಣು ಭಕ್ತಿಯ ಸಕಲ ಸದ್ಗುಣಗಳಿಗೂ ಹೃದಯ ಸ್ಥಾನೀಯ ಎಂಬುದು ವೈಷ್ಣವರ ನಂಬಿಕೆ. ಹೀಗಾಗಿ ಇದು ವೈಷ್ಣವರ ವಿಶಿಷ್ಟ ಲಕ್ಷಣವೆನ್ನಿಸಿದೆ. ವೈಷ್ಣವತ್ವಕ್ಕೆ ದ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯ ಲಕ್ಷಣ ಎಂಬುದು ಇದರ ಹಿರಿಮೆ.

ಪ್ರತಿದಿನದ ಗೋಪಿಚಂದನದ ಊರ್ಧ್ವ ಪುಂಡ್ರಧಾರಣೆ, ಪಂಚಮುದ್ರ ಧಾರಣೆಯಂತೆ ಅತ್ಯಂತ ಮಹತ್ವಪೂರ್ಣವಾದ ಬಾಹ್ಯಸಂಸ್ಕಾರವಾಗಿ ಈ ತಪ್ತ ಮುದ್ರಾಧಾರಣೆ ನಡೆಯುತ್ತದೆ.

ಪ್ರತಿ ವರ್ಷವೂ ಶಯನೈಕಾದಶೀ (ಆಷಾಢಶುಕ್ಲ ಏಕಾದಶಿ- ಈ ಸಲ ಜುಲೈ 11 ಸೋಮವಾರ) ದಿನ ತಪ್ತ ಮುದ್ರಾಧಾರಣೆಯನ್ನು ಮಠಾಧೀಶರಿಂದಲೇ ಸ್ವೀಕರಿಸುವುದು ಶ್ರೇಷ್ಠ ಎಂದು ಶಾಸ್ತ್ರಗಳಲ್ಲಿದೆ. ಇಂತಹ (ತಪ್ತ) ಸುದರ್ಶನ ಧಾರಣೆಯು ನಿರ್ಮಲ ತತ್ತ್ವಜ್ಞಾನ ಪ್ರಾಪ್ತಿಯ ಅಪೂರ್ವ ಸಾಧನ ಎಂಬುದರಲ್ಲಿ ಅಪಾರ ಔಚಿತ್ಯವಿದೆ.

ತಪ್ತಮುದ್ರಾಧಾರಣೆಯ ಮಹತ್ವವು ಋಗ್ವೇದ, ಪದ್ಮ ಪುರಾಣ, ಮಹಾಭಾರತಾದಿ ಇತಿಹಾಸದಲ್ಲೂ ವರ್ಣಿತವಾಗಿದೆ. ಶ್ರೀ ಮಧ್ವಾಚಾರ್ಯರು (ತಪ್ತಮುದ್ರೆ ಮತ್ತು ಶಾಸ್ತ್ರ) ತಮ್ಮ ಶಿಷ್ಯರಿಗೆ ಸುದರ್ಶನದ್ವಯ ಅನುಗ್ರಹಿಸಿದ ವಿವರ ಸುಮಧ್ವ ವಿಜಯದಲ್ಲಿ ಉಕ್ತವಾಗಿದೆ. ಅಂತೆಯೇ ಶ್ರೀ ವಾದಿರಾಜ ಸ್ವಾಮಿಗಳ ಚಕ್ರಸ್ತುತಿ, ಶ್ರೀ ವಿಜಯೀಂದ್ರರ ತಪ್ತಚಕ್ರ ಮೀಮಾಂಸ, ಶ್ರೀ ಸತ್ಯಾಭಿನವತೀರ್ಥರ ರಾಮಾಮೃತ ಮಹಾರ್ಣವ, ಶ್ರೀ ಕೃಷ್ಣಾಚಾರ್ಯರ ಸ್ಮೃತಿ ಮುಕ್ತಾವಲಿ ಹಾಗೂ ತಪ್ತಚಕ್ರಭೂಷಣದಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಇನ್ನು ಮಠಗಳ ಕಲ್ಪನೆಯು ಸಹ ಶ್ರೀ ಮಧ್ವಾಚಾರ್ಯರೇ ಹಾಕಿಕೊಟ್ಟ ಸತ್ಪರಂಪರೆ. ವ್ಯಕ್ತಿಗಿಂತ ಸಂಸ್ಥೆಯು ದೊಡ್ಡದು ಎಂಬ ಮಾತೂ ಸಹ ಇದಕ್ಕೆ ಪೋಷಕ. ತಾನೇ ತಪ್ತಮುದ್ರೆಗಳನ್ನು ಹಾಕಿಕೊಳ್ಳುವ ಮೂಲಕ ಗುರುಪೀಠಗಳಿಗೆ ತೋರಿಸುವ ಅನಾದರವು ಐಹಿಕ ಪಾರತ್ರಿಕ ಅನರ್ಥಗಳಿಗೆ ಕಾರಣವಾಗುತ್ತದೆ.

ತಪ್ತಚಕ್ರಾಂಕನಕ್ಕೆ `ಜಾತಕರ್ಮ`ವೇ ಅತ್ಯಂತ ಮುಖ್ಯಕಾಲ. ಅನಂತರ ಚೌಲ, ಉಪನಯನಾದಿ, ಸಂಸ್ಕಾರಗಳ ಸಮಯದಲ್ಲೂ ಮಂತ್ರಾಧ್ಯಯನ ಸಮಯದಲ್ಲೂ ಅದು ಅವಶ್ಯ. ಸ್ತ್ರೀಯರಿಗೆ ವಿವಾಹ ಸಮಯವು ಅತ್ಯಂತ ಸೂಕ್ತಕಾಲ.

ಮುದ್ರಾಧಾರಣೆಗೆ ಬಳಸುವ ಸುದರ್ಶನ ಮತ್ತು ಪಾಂಚಜನ್ಯ ಮುದ್ರೆಗಳನ್ನು ಉತ್ತಮ ಚಿನ್ನದಿಂದ ಶಾಸ್ತ್ರೋಕ್ತ ಕ್ರಮದಲ್ಲಿ ಮಾಡಿಸಿರಬೇಕು. ಅದನ್ನು ಬೆಂಕಿಯಲ್ಲಿ ಕಾಯಿಸಿ ಮೈ ಮೇಲೆ ಮುದ್ರೆ ಹಾಕಲಾಗುತ್ತದೆ.

ಬಲ ಭುಜ, ಬಲಸ್ತನ ಭಾಗದಲ್ಲಿ ಚಕ್ರವನ್ನು, ಎಡ ಭುಜ, ಎಡ ಸ್ತನ ಭಾಗದಲ್ಲಿ ಶಂಖವನ್ನು, ಹೊಟ್ಟೆಯ ಮೇಲೆ ಒಂದು ಚಕ್ರವನ್ನು ಮುದ್ರಿಸಬೇಕು.

ಪ್ರಯತ್ನಪೂರ್ವಕವಾಗಿ ಈ ಪಂಚಮುದ್ರೆಯನ್ನು ಧರಿಸಬೇಕು. ಉಪವೀತರಾಗದ ಬಾಲಕರಿಗೆ ಹೊಟ್ಟೆಯ ಮೇಲೆ ಮಾತ್ರ ಒಂದು ಚಕ್ರ, ಸ್ತ್ರೀಯರಿಗೆ ಬಲ, ಎಡ ಕೈಗಳ ಮೇಲೆ ಮಾತ್ರ ಕ್ರಮವಾಗಿ ಚಕ್ರ ಶಂಖಗಳನ್ನು ಮುದ್ರಿಸಬೇಕು.

ಯಾವ ವಸ್ತು ಯಾರ ಅಧೀನವೋ ಅದರ ಮೇಲೆ ಅವರ ಚಿಹ್ನೆ ಹಾಕುವ ನಿಯಮವಿದೆ. ಈ ದೇಹ (ನಮ್ಮದಲ್ಲ) ನಮ್ಮ ಅಧೀನವಾದದ್ದಲ್ಲ. ಭಗವಂತನ ಅಧೀನವಾದದ್ದು. ಭಗವಂತನ ಅಧೀನವಾದ ಈ ದೇಹದ ಮೇಲೆ ಭಗವಂತನ ಚಿಹ್ನೆಗಾದ ಶಂಖ-ಚಕ್ರಗಳು ಬೀಳಬೇಕು ಎನ್ನುವುದು ಇದರ ಹಿಂದಿನ ತತ್ವ.

ಈ ದೇಹಕ್ಕೆ ಎಷ್ಟು ರೀತಿಯಿಂದ ವಿಹಿತವಾದ ಕ್ಲೇಶಗಳನ್ನು (ದಂಡನೆಯನ್ನು) ಕೊಡುತ್ತೇವೆ ಅದೂ ಒಂದು ತಪಸ್ಸು. ಈ ದೃಷ್ಟಿಯಲ್ಲಿ ಶಾಸ್ತ್ರೋಕ್ತವಾದ ದೇಹ ದಂಡನೆಯೂ ಒಂದು ತಪಸ್ಸು ಎಂಬ ಕಾರಣಕ್ಕಾಗಿಯೂ ತಪ್ತಮುದ್ರಾಧಾರಣೆ ವಾಡಿಕೆಯಲ್ಲಿದೆ.

ಮುದ್ರಾಧಾರಣೆಯ ಮುದ್ರೆಯಲ್ಲಿ ವೈದಿಕ ಆಧ್ಯಾತ್ಮಿಕ ದೃಷ್ಟಿಕೋನವಿದ್ದಂತೆ, ಸೂಕ್ಷ್ಮವಾಗಿ ವೈಜ್ಞಾನಿಕ ವೈದ್ಯಕೀಯ ಉದ್ದೇಶವೂ ಇದೆ. ಕೆಲವು ತಜ್ಞರು ಅಭಿಪ್ರಾಯಪಟ್ಟಂತೆ ಇದೊಂದು ಶಾಕ್ ಟ್ರೀಟ್‌ಮೆಂಟ್.

No comments:

Post a Comment